ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ದಕ್ಷಯಜ್ಞ ಯಕ್ಷಗಾನ ನೋಡಿ‌ ಖುದ್ದು ಕ್ರುಶ್ಚೇವ್ ಕೈಕುಲುಕಿದ್ದರು - ಪೆರುವೋಡಿ ನಾರಾಯಣ ಭಟ್ಟ

ಲೇಖಕರು : ರಾಮಚ೦ದ್ರ ಪದ್ಯಾಣ
ಗುರುವಾರ, ಜುಲೈ 11 , 2013

ಅಭಿನಯದ ಸಹಜತೆ, ಅರ್ಥಗಾರಿಕೆಯಲ್ಲಿನ ಪಾತ್ರೌಚಿತ್ಯಗಳನ್ನು ಸದಾ ಕಾಪಾಡಿಕೊಂಡು ಬಂದ ಅಜಾತಶತ್ರು, ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟರದ್ದು ಯಕ್ಷಲೋಕದಲ್ಲಿ ದೊಡ್ಡ ಹೆಸರು. ಕಡಲ ತೀರದ ಭಾರ್ಗವ ಡಾ.ಶಿವರಾಮ ಕಾರಂತರು ಚಿತ್ರೀಕರಿಸಿದ ಯಕ್ಷಗಾನ ಸಿನಿಮಾದಿಂದ ಹಿಡಿದು ಯಕ್ಷಗಾನದ ಯಾವುದೇ ಪ್ರಸಂಗಕ್ಕೂ ಸೈ ಎನ್ನುವ ಭಟ್ಟರನ್ನು ಹಲವು ಪ್ರಶಸ್ತಿ, ಪುರಸ್ಕಾರಗಳು ಅರಸಿಕೊಂಡು ಬಂದಿದೆ. ಈ ಯಕ್ಷರಂಗದ ದಿಗ್ಗಜ ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪದ್ಯಾಣ.ಗೋಪಾಲಕೃಷ್ಣರ ಕುರಿತು ಆತ್ಮೀಯತೆಯಿಂದ ಬರೆದ ಪ.ಗೋ ಕುರಿತಾದ ಭಟ್ಟರ ಮಾತುಗಳು.







1955ನೇ ಇಸ್ವಿ ಸೆಪ್ಟೆಂಬರ್ ತಿಂಗಳಲ್ಲಿ ಒಂದು ದಿವಸ ಪದ್ಯಾಣ ಗೋಪಾಲಕೃಷ್ಣ ನಮ್ಮ ಮನೆಯಲ್ಲಿ ಪ್ರತ್ಯಕ್ಷನಾದ. ಆತ ಮೈಸೂರಿನಿಂದ ಬಂದಿದ್ದ. ಪ್ರಸಿದ್ಧ ದಸರಾ (ವಸ್ತು ಪ್ರದರ್ಶನ)ದಲ್ಲಿ ಒಂದು ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಏರ್ಪಾಡು ಮಾಡುವ ಪೂರ್ವ ಸಿದ್ಧತೆಗಾಗಿ ಆತ ಬಂದಿದ್ದ. ಧರ್ಮಸ್ಥಳ ಮೇಳದ ವ್ಯವಸ್ಥಾಪಕ ಸ್ಥಾನದಲ್ಲಿದ್ದ ಹಿರಿಯ ಕಲಾವಿದ ಕುರಿಯ ವಿಠಲಶಾಸ್ತ್ರಿ ಮೊದಲಾದವರನ್ನೆಲ್ಲ ಭೇಟಿ ಮಾಡಿಕೊಂಡೇ, ಆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನನ್ನನ್ನು ಆಹ್ವಾನಿಸಲು ಬಂದಿದ್ದ.

ಗೆಜ್ಜೆ ಬಿಚ್ಚಿ ಇರಿಸಿದ ದಿನಗಳವು. ಎಂದರೆ ವಾರ್ಷಿಕ ತಿರುಗಾಟ ಮುಗಿಸಿಕೊಂಡು, 'ಪತ್ತನಾಜೆ'ಗೆ, ದೇವಸ್ಥಾನಕ್ಕೆ ಪೆಟ್ಟಿಗೆ ಸಹಿತ ಹಿಂದಿರುಗಿದ ಮೇಲೆ, ಮುಂದೆ 'ದೀಪಾವಳಿ' ತರುವಾಯವೇ ಆಟ-ತಿರುಗಾಟ ಪ್ರಾರಂಭವಾಗುವುದು ಮೇಳದ ಕಟ್ಟಳೆಯಾಗಿತ್ತು. ಈ ಸಂಪ್ರದಾಯವನ್ನು ಮೀರುವುದು ಸಾಧ್ಯವಿರಲಿಲ್ಲ. ಈ ವಿಚಾರ ತಿಳಿದಿದ್ದ ಗೋಪಾಲಕೃಷ್ಣ 'ಇದು ಮೇಳ ಅಲ್ಲ, ತಿರುಗಾಟವೂ ಅಲ್ಲ, ಕೆಲವು ಕಲಾವಿದರನ್ನು (ವೇಷಧಾರಿಗಳು) ವೇಷಭೂಷಣ- ಕಿರೀಟ ಇತ್ಯಾದಿ ಸಲಕರಣೆಗಳನ್ನು ಎರವಲು ಪಡೆದುಕೊಂಡು ಹೋಗುತ್ತಿರುವುದು' ಎಂದಿತ್ಯಾದಿಯಾಗಿ ವಿವರಣೆ ನೀಡಿ ಮೇಳದ ಕೃಪಾ ಪೋಷಕರಾದ ಧರ್ಮಾಧಿಕಾರಿಗಳ ಅಪ್ಪಣೆ ಪಡೆದುಕೊಂಡಿದ್ದ. ಇನ್ನೊಂದು ಪ್ರಬಲವಾದ ಕಾರಣವೆಂದರೆ, 'ಜಗದ್ವಿಖ್ಯಾತ ಮೈಸೂರು ದಸರಾ'ದಲ್ಲಿ ಆಟ ಆಡಲು ಮೈಸೂರು ಸರಕಾರದ ವತಿಯಿಂದ ಬಂದ ಆಹ್ವಾನವನ್ನು ಮಾನ್ಯ ಮಾಡದೆ ಇರುವುದು ಸೌಜನ್ಯವಲ್ಲ-200 ವರ್ಷಗಳ ಹಿಂದೊಮ್ಮೆ 'ಅರಮನೆ'ಯ ಆಮಂತ್ರಣದ ಮೇರೆಗೆ, ದರ್ಬಾರ್ ನಲ್ಲಿ ಆಡಿದ ಬಯಲಾಟದ ತರುವಾಯ ದೊರಕಿದ ಮೊದಲ ಆಹ್ವಾನ ಇದು. ಗೌರವಾಸ್ಪದ ಅಂಶ ಎಂದು ವಿವರಣೆ ನೀಡಿ, ಅವರ ಮನಒಲಿಸುವುದರಲ್ಲಿ ಪ.ಗೋ.ಯಶಸ್ವಿಯಾಗಿದ್ದ.

1995ನೇ ಇಸ್ವಿನಲ್ಲಿ ಬೆ೦ಗಳೂರಿನಲ್ಲಿ ನಡೆದ ಸಾ೦ಸ್ಕೃತಿಕ ಕಾರ್ಯಕ್ರಮದ ಸುತ್ತೋಲೆ.
ವಿವರವಾಗಿ ನೋಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಪ್ರಸಂಗವನ್ನು ಎರಡು ಗಂಟೆಗಳ ಮಿತಿಯಲ್ಲಿ ಪ್ರದರ್ಶಿಸಿದ್ದಾಯಿತು. ಆಟ ಚೆನ್ನಾಗಿ ಆಯಿತು. ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು-ಯಕ್ಷಗಾನದ ಭಾಷೆಯಲ್ಲೇ ಹೇಳುವುದಾದರೆ 'ಜಯಜಯಾ' ಎನ್ನಿಸಿತು.(ಆ ಪ್ರಸಂಗದಲ್ಲಿ ನಾನು ಹಾಸ್ಯ ಪಾತ್ರವಹಿಸಿದ್ದೆ) ಮರುದಿನ ಒಂದು ತಾಳಮದ್ದಲೆ ಕಾರ್ಯಕ್ರಮ. ಪಿಟೀಲು ಚೌಡಯ್ಯನವರ 'ಅಯ್ಯನಾರ್ ಕಲಾಶಾಲೆ'ಯಲ್ಲಿ ನಡೆಯಿತು. ಹಿರಿಯ ಕವಿ ಪ್ರೊ.ಗೋಪಾಲಕೃಷ್ಣ ಅಡಿಗರು ಅಧ್ಯಕ್ಷರಾಗಿದ್ದರು. ಆಗ ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಎಂ.ಬಿ.ಮರಕಿಣಿ ಮತ್ತು ಕೆ.ಆರ್.ಗೋಪಾಲ ಕೃಷ್ಣಯ್ಯ(ಕೀಲಾರು) ಇವರ ಕೋಣೆಯಲ್ಲಿ ಪ.ಗೋ.ತಾತ್ಕಾಲಿಕವಾಗಿ ಠಿಕಾಣಿ ಹೂಡಿದ್ದು ಈ ಎಲ್ಲ ಸಾಧನೆಗಳ ಹಿಂದೆ ಅವರ ಪೂರ್ಣ ಸಹಯೋಗವಿತ್ತು.

ದಸರೆಯ ಆಟದ ಯಶಸ್ಸಿನ ಸುದ್ದಿ ಬೆಂಗಳೂರಿಗೆ ತಲುಪುವುದು ತಡವಾಗಲಿಲ್ಲ. ಇಷ್ಟರಲ್ಲೇ ರಷ್ಯಾದೇಶದ (ಆಗಿನ ಯು.ಎಸ್.ಎಸ್.ಆರ್.) ಪ್ರಧಾನ ಮಾರ್ಶಲ್ ಬುಲ್ಗಾನಿನ್ ಮತ್ತು (ಸರ್ವೋಚ್ಛ ಮುಖಂಡ) ಕಾಮ್ರೇಡ್ ಕ್ರುಶ್ಚೇವ್ ಬೆಂಗಳೂರಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಯಕ್ಷಗಾನ ಬಯಲಾಟವನ್ನು ಪ್ರದರ್ಶಿಸಲು ಆಹ್ವಾನ ಬರಲು ಮತ್ತೊಮ್ಮೆ ಪ.ಗೋ.ಚುರುಕಾಗಿ ಓಡಾಡಿದ. ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ನಡೆದ ಸಾಂಸ್ಕೃಕ ಸಂಜೆಯಲ್ಲಿ 'ದಕ್ಷಯಜ್ಞ' ಪ್ರಸಂಗವನ್ನು ಆಡಿ ತೋರಿಸುವುದಕ್ಕೆ 10 ನಿಮಿಷಗಳ ಕಾಲಾವಧಿಯನ್ನು ನಿಗದಿ ಮಾಡಿದ್ದರು! ( ಆ ರಸ ಸಂಜೆಯಲ್ಲಿನ ಕಾರ್ಯಕ್ರಮಗಳಲ್ಲಿ 10 ನಿಮಿಷದ ಕಾಲಾವಧಿ ವೀಣೆ ದೊರೆಸ್ವಾಮಿಯವರ ಪಂಚವೀಣಾವಾದನಕ್ಕೂ, ಜೌಡಯ್ಯನವರ ಪಿಟೀಲಿಗೂ ದೊರಕಿದ್ದು. ಮೂರನೇ 10 ನಿಮಿಷ ಅವಧಿಯ ಕಾರ್ಯಕ್ರಮವೆಂದರೆ ನಮ್ಮ ದಕ್ಷಯಜ್ಞ ಬಯಲಾಟವೇ).

ಪತ್ರಿಕೋದ್ಯಮದ ಇನ್ನೋರ್ವ ದಿಗ್ಗಜ ಪದ್ಯಾಣ.ಗೋಪಾಲಕೃಷ್ಣ
ಗೋಪಾಲಕೃಷ್ಣನಿಗಿದ್ದ ಸಿನಿಮಾ ತಯಾರಿಕೆಯ ಅನುಭವದಿಂದ ಒಂದು ಕ್ಷಣವನ್ನೂ ವ್ಯರ್ಥಗೊಳಿಸದೆ ಹತ್ತೇ ನಿಮಿಷಗಳ ಕಾಲಾವಧಿಯಲ್ಲಿ 'ದಕ್ಷಯಜ್ಞ' ಕಥಾ ಭಾಗದ ಪ್ರಮುಖ ಘಟನೆಯನ್ನು ಆಡಿತೋರಿಸುವುದು ಸಾಧ್ಯವಾಯಿತು- ಅಷ್ಟೇ ಅಲ್ಲದೆ ಆಟದ ಪ್ರದರ್ಶನವನ್ನು ನೋಡಿ ವಿದೇಶೀ ಅತಿಥಿಗಳೂ, ಸಾವಿರಾರು ಪ್ರೇಕ್ಷಕರೂ ಸಂತೋಷ ಭರಿತರಾದರು. ವಿಠಲ ಶಾಸ್ತ್ರಿಗಳು ಈಶ್ವರನ ಪಾತ್ರದಲ್ಲಿ, ಕೋಳ್ಯೂರು ರಾಮಚಂದ್ರ ಪಾರ್ವತಿಯಾಗಿ, ಬಣ್ಣದ ಮಾಲಿಂಗ ವೀರಭದ್ರನಾಗಿ ನೀಡಿದ ಅಭಿನಯ, ಆ ಚೆಂಡೆಮದ್ದಲೆ, ತಾಳ-ಚಕ್ರತಾಳಗಳ ಹಿಮ್ಮೇಳ, ದೀವಟಿಗೆ, ದೊಂದಿ-ರಾಳದ ಹುಡಿಹಾರಿಸಿದ ಕುಣಿತ ಅದ್ಬುತವಾಗಿತ್ತು. ಅತಿಥಿ ಕ್ರುಶ್ಚೇವ್ ಕುಳಿತಲ್ಲಿಂದ ಎದ್ದು ರಂಗಸ್ಥಳದ ಮೇಲೆ ಬಂದು ಕಲಾವಿರ ಕೈಕುಲುಕಿ ಅಭಿನಂದಿಸಿದರು. ಫೋಟೋ ತೆಗೆಸಿದರು. ದಿನಾಂಕ 29-11-55ರ ತಾಯಿನಾಡು ದಿನ ಪತ್ರಿಕೆಯಲ್ಲಿ ಈ ಚಿತ್ರ ಪ್ರಕಟವಾಯಿತು.

ಮರುದಿನ ಸಂಜೆ ಕನ್ನಡ ಸಾಹಿತ್ಯ ಪರಿಶತ್ತಿನಲ್ಲಿ ಪೆರ್ವೊಡಿ ಸಂಕಯ್ಯ ಭಾಗವತ ವಿರಚಿತ ಪ್ರಸಂಗವನ್ನೂ ರಾತ್ರೆ ಮಲ್ಲೇಶ್ವರದ ಕೆನರಾಹಾಲ್ ನಲ್ಲಿ ಕರ್ಣಾವಸಾನ ಪ್ರಸಂಗವ್ನೂ ಆಡಿ ತೋರಿಸುವ ಮೂಲಕ ಮೈಸೂರು ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದಕ್ಷಿಣ ಕನ್ನಡದ 'ಯಕ್ಷಗಾನ ಬಯಲಾಟ'ಕ್ಕೊಂದು ಸ್ಥಿರವಾದ ಸ್ಥಾನ ದೊರಕುವಂತಾಯಿತು. ಈ ರೀತಿ, ಬೆಂಗಳೂರು-ಮೈಸೂರಲ್ಲಿ ಯಕ್ಷಗಾನ ಬಯಲಾಟದ ಕೇಳಿ ಬಂಡಿದ ಮೊದಲಿಗ ಪ.ಗೋಪಾಲಕೃಷ್ಣ ಎಂಬುದೂ, ಆತ ನನ್ನ ಸಹೋದರ ಎಂಬೂದೂ ನನಗೊಂದು ಹೆಮ್ಮೆಯ ವಿಚಾರವಾಗಿರುತ್ತದೆ.

ಮುಂದೆ ಪ.ಗೋ. ನೇತೃತ್ವದಲ್ಲಿ, ಭಾರತ ಸರಕಾರದ ಆಹ್ವಾನದ ಮೇರೆಗೆ ದೆಹಲಿಯಲ್ಲಿ ಕೂಡ ಬಯಲಾಟ ಪ್ರದರ್ಶನ ನೆಡಯಿತು. ಸುಪ್ರಸಿದ್ಧ ಆಂಗ್ಲ ಸಾಪ್ತಾಹಿಕ 'ಇಲೆಸ್ಟ್ರೇಟೆಡ್ ವೀಕ್ಲಿ’ ಮೊದಲಾದ ಪತ್ರಿಕೆಗಳಲ್ಲಿ ವಿಸ್ತೃತವಾದ ಸಚಿತ್ರ ಬರಹಗಳೂ ಪ್ರಕಟವಾದವು. ಆಕಾಶವಾಣಿಯಲ್ಲಿ ಅನೇಕ ತಾಳಮದ್ದಳೆ ಕಾರ್ಯಕ್ರಮಗಳನ್ನು ಸಹ ಪ.ಗೋ.ಬಿತ್ತರಿಸಿದರು.

ಕೃಪೆ : http://ramachandrapadyana.blogspot.in/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ